ಗೃಹಲಕ್ಷ್ಮಿ ಯೋಜನೆಗೆ 30 ರಂದು ಚಾಲನೆ :
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ । ಮೈಸೂರಿನಲ್ಲಿ ಬೃಹತ್ ಸಮಾವೇಶ !!!
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಗೃಹಲಕ್ಷ್ಮಿ' ಗ್ಯಾರಂಟಿ ಯೋಜನೆಗೆ ಆಗಸ್ಟ್ 30 ರಂದು ನಗರದಲ್ಲಿ ಚಾಲನೆ ನೀಡಲಾಗುವದು. ಮಹಾರಾಜ ಕಾಲೇಜು ಮೈದಾನದಲ್ಲಿ ಸುಮಾರು 1.5 ಲಕ್ಷ ಮಹಿಳಾ ಫಲಾನುಭವಿಗಳನ್ನು ಸೇರಿಸಿ, ಸಮಾವೇಶ ನಡೆಸುವ ಮೂಲಕ ಯೋಜನೆ ಉದ್ಘಾಟನೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭಾನುವಾರ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಎಐಸಿಸಿ ಅಧ್ಯಕ್ಷ ಎಂ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಈ ಹಿಂದೆ ಬೆಳಗಾವಿಯಲ್ಲಿ ಸಮಾವೇಶ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ರಾಷ್ಟೀಯ ನಾಯಕರು ಬೆಂಗಳೂರಿಗೆ ಆಗಮಿಸಲಿದ್ದು, ಸಮಯದ ಅಭಾವ ಇರುವುದರಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದ 1.85 ಕೋಟಿಗೂ ಹೆಚ್ಚು ಕುಟುಂಬಗಳ ಯಜಮಾನಿಯರ ಖಾತೆಗಳಿಗೆ ಏಕಕಾಲದಲ್ಲಿ ಅಂದು ತಲಾ 2 ಸಾವಿರ ಜೆಮೆಯಾಗಲಿದೆ. ಇದರಲ್ಲಿ ಮೈಸೂರು ಭಾಗದ 4 ಜಿಲ್ಲೆಗಳ 13,82,430 ಕುಟುಂಬಗಳ ಫಲಾನುಭವಿಗಳು ಸೇರಿದ್ದಾರೆ ಎಂದರು.
ಈಗಾಗಲೇ ಶೇ 80 ರಷ್ಟು ನೋಂದಣಿ ಪ್ರಕ್ರಿಯೆ ಮುಗಿದಿದ್ದು, ನೋಂದಣಿಗೆ ಯಾವುದೇ ಅಂತಿಮ ಸಮಯ ನಿಗದಿ ಮಾಡಿಲ್ಲ.ನೋಂದಣಿ ಕಾರ್ಯ ನಿರಂತರವಾಗಿರುತ್ತದೆ. ಆದರೆ ಕೆಲ ಪಡಿತರ ಕಾರ್ಡ್ ಗಳ ಜೋಡಣೆ ಕಾರ್ಯದಲ್ಲಿ ತೊಂದರೆ ಆಗಿದ್ದು, ಅದನ್ನು ಶೀಘ್ರವೇ ಸರಿಪಡಿಸಿ ಮುಂದಿನ ದಿನಗಳಲ್ಲಿ ಎಲ್ಲ ಫಲಾನುಭವಿಗಳಿಗೂ ಯೋಜನೆ ತಲುಪಿಸಲಾಗುವುದು. ಸದ್ಯಕ್ಕೆ ಹೊಸ ಕಾರ್ಡ್ ಗಳ ವಿತರಣೆ ನಿಲ್ಲಿಸಿದ್ದು, ಮುಂದೆ ಕಾರ್ಡ್ ವಿತರಣೆ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಪ್ರಶೆಗೆ ಉತ್ತರಿಸಿದರು.
ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಮಹದೇವಪ್ಪ ಮಾತನಾಡಿ, ರಾಜ್ಯದ 1.30 ಕೋಟಿ ಕುಟುಂಬಗಳು ಸ್ವಾವಲಂಬಿ ಜೀವನ ನಡೆಸಲು ಇದೊಂದು ಉತ್ತಮ ಯೋಜನೆಯಾಗಿದ್ದು, ಸ್ವಾತಂತ್ರ್ಯನಂತರದ ಬಹುದೊಡ್ಡ ಯೋಜನೆಯಾಗಿದೆ ಎಂದು ಹೇಳಿದರು...
ಮಹಿಳಾ ಸಶಕ್ತಿಕರಣದೊಂದಿಗೆ ಮಹಿಳೆಯ ಆತ್ಮಗೌರವ ಹೆಚ್ಚಿಸುವ ಕಾರ್ಯಕ್ರಮವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳಲಿದ್ದು, ಅವರಿಗೆ ಸರಿಯಾದ ಊಟ, ಶೌಚಗೃಹ, ಬಸ್ ವ್ಯವಸ್ಥೆ, ಕುಡಿಯುವ ನೀರು ಸಮರ್ಪಕವಾಗಿರಲಿದೆ ಎಂದರು.
ಶಾಸಕರಾದ ಕೆ ಹರೀಶ್ ಗೌಡ, ಡಿ ರವಿಶಂಕರ್, ದರ್ಶನ ಧ್ರುವನಾರಾಯಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಪ್ರಕಾಶ್ ಮತ್ತಿರರು ಇದ್ದರು.
Tags
Govt.scheme

WhatsApp Group