ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ ಯೋಜನೆ

 ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ ಯೋಜನೆ


         2022-23 ನೇ ಸಾಲಿನಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯದಿಂದ ಪುಣ್ಯ ಕ್ಷೇತ್ರಗಳಾದ ವಾರಾಣಸಿ, ಅಯೋಧ್ಯೆ ಮತ್ತು ಪ್ರಯಾಗ್- ರಾಜ್ ಕ್ಷೇತ್ರಗಳಿಗೆ ಕಡಿಮೆ ವೆಚ್ಚದಲ್ಲಿ ತೆರಳಲು ಅನುಕೂಲವಾಗುವಂತೆ ರಿಯಾಯಿತಿ ದರದಲ್ಲಿ ಪ್ಯಾಕೇಜ್ ರೂಪಿಸಿ " ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ " ಯೋಜನೆಯನ್ನು ಐಸಿಎಆರ್ ಟಿಸಿ ಮತ್ತು ಭಾರತೀಯ ರೈಲ್ವೆ ಇಲಾಖೆಯ ಸಹಯೋಗದೊಂದಿಗೆ ವಿಶೇಷ ರೈಲಿನ ಮೂಲಕ ಕೈಗೊಳ್ಳಲಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಈ ಯೋಜನೆಯಡಿ ಪ್ರಯಾಣಿಸುವ ಯಾತ್ರಾರ್ಥಿಗಳಿಗೆ ತಲಾ ರೂ. 20,000 ಗಳಂತೆ ಪ್ಯಾಕೇಜ್ ರೂಪಿಸಿದ್ದು, ಈ ಮೊತ್ತದಲ್ಲಿ ತಲಾ ರೂ. 5000 ರಾಜ್ಯ ಸರ್ಕಾರದ ವತಿಯಿಯಿಂದ ಭರಿಸಿ ಉಳಿದ ಮೊತ್ತ ರೂ. 15,000 ಯಾತ್ರಾರ್ಥಿಗಳು ಪಾವತಿಸಬೇಕಾಗಿರುತ್ತದೆ. ಈ ವಿಶೇಷ ರೈಲಿನಲ್ಲಿ ತೆರಳುವ ಯಾತ್ರಾರ್ಥಿಗಳಿಗೆ ಉಪಹಾರ, ಊಟ,ತಂಗುವಿಕೆ, ಸ್ಥಳೀಯ ಸಾರಿಗೆ ಮತ್ತು ಸ್ಥಳೀಯ ವೀಕ್ಷಣೆ ಒಳಗೊಂಡಿದ್ದು, ಇದು ಒಟ್ಟು 07 ದಿನಗಳ ಪ್ರವಾಸವಾಗಿರುತ್ತದೆ.

ಈ ಯೋಜನೆಯಡಿ ಈ ವರೆಗಿನ ಒಟ್ಟು 3 ಟ್ರಿಪ್ ಗಳನ್ನು ಪೂರೈಸಿದ್ದು, ಸದರಿ ವಿಶೇಷ ರೈಲಿನಲ್ಲಿ ಒಟ್ಟು 1644 ಯಾತ್ರಾರ್ಥಿಗಳು ಯಾತ್ರೆ ಪೂರೈಸಿದ್ದು, ಸದರಿ ಯಾತ್ರಾರ್ಥಿಗಳಿಗೆ ಪ್ರಯಾಣದ ಒಟ್ಟು ಪ್ಯಾಕೇಜ್ ದರ ರೂ 20,000/- ಗಳ ಪೈಕಿ ಸರ್ಕಾರದಿಂದ ತಲಾ ರೂ 5000 ಗಳಂತೆ 82.20 ಲಕ್ಷಗಳ ಸಹಾಯಧನ ವಿತರಿಸಲಾಗಿದೆ ಎಂದರು.

ನಾಲ್ಕನೇ ಟ್ರಿಪ್ಪಿನ ವಿಶೇಷ ರೈಲು ದಿನಾಂಕ: 29-07-2023 ರಂದು ಬೆಂಗಳೂರಿನಿಂದ ಹೋರಾಡಲಿದ್ದು, ಸದರಿ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳು ಈ ಕೆಳಕಂಡ ಲಿಂಕ್ ಮೂಲಕ ಅಥವಾ IRCTC ಪೋರ್ಟಲ್ ಮೂಲಕ ತಮ್ಮ ಟಿಕೆಟ್ ಅನ್ನು ಕಾಯ್ದಿರಿಸಿಕೊಳ್ಳಬಹುದಾಗಿದೆ ಎಂದರು.

       ಈಗ ಹೊಸದಾಗಿ ಸುಸಜ್ಜಿತ ಕೋಚ್ ಗಳನ್ನು ಅಳವಡಿಸಲಾಗಿದ್ದು, ಇದು ಸುಸಜ್ಜಿತವಾದ ಸ್ಥಳದಲ್ಲಿಯೇ ಅಡುಗೆ ತಯಾರು ಮಾಡುವ ಅಡುಗೆ ಮನೆ ಒಳಗೊಂಡಿರುತ್ತದೆ. ಹಾಗೂ ಯಾತ್ರಾರ್ಥಿಗಳ ಹಿತ ದೃಷ್ಟಿಯಿಂದ ಇಬ್ಬರು ವೈದ್ಯರು ಸಹ ಪ್ರಯಾಣಿಸುವರು. ಈ ಸೌಲಭ್ಯವನ್ನು ರಾಜ್ಯದ ಎಲ್ಲಾ ಭಕ್ತಾಧಿಗಳು ಸದುಪಯೋಗ ಪಡಿಸಿಕೊಂಡು, ಶ್ರೀ ಕಾಶಿ ವಿಶ್ವನಾಥ ಸ್ವಾಮಿಗಳ ದರ್ಶನ ಪಡೆಯುವಂತೆ ರಾಮಲಿಂಗಾರೆಡ್ಡಿ ಅವರು ಕೋರಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು